ಕಲಬುರಗಿ : ರಾಜ್ಯದಲ್ಲಿ ಅಬಕಾರಿ ವಲಯದಲ್ಲಿರುವ ಕುಂದು ಕೊರತೆಗಳಿಗೆ ಜುಲೈ ತಿಂಗಳಿನಿಂದ ವ್ಯಾಪಕ ತಿದ್ದುಪಡಿ ಮಾಡಿ ಅಬಕಾರಿ ವ್ಯಾಪಾರಿ ಸ್ನೇಹಿ ಕ್ರಮ ಜಾರಿಗೊಳಿಸುವುದಾಗಿ ರಾಜ್ಯ ಅಬಕಾರಿ ಸಚಿವರಾದ ಆರ್. ಬಿ ತಿಮ್ಮಾಪುರ ಹೇಳಿದರು.
ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಜೂನ್ 21ರಂದು ಶುಕ್ರವಾರ ಏರ್ಪಡಿಸಿದ ಸನ್ಮಾನ ಹಾಗೂ ಅಬಕಾರಿ ವ್ಯಾಪಾರಸ್ಥರ ಜೊತೆಗಿನ ಚರ್ಚೆಯಲ್ಲಿ ಮಾತನಾಡಿದ ಅವರು ನೆರೆ ರಾಜ್ಯಗಳ ಮತ್ತು ರಾಜ್ಯದಲ್ಲಿ ದೊರಕುವ ಮದ್ಯ ದರಗಳಲ್ಲಿ ವ್ಯತ್ಯಾಸವಿದ್ದು ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿರುವ ಮದ್ಯದಂಗಡಿ ಮತ್ತು ಬಾರ್ ವ್ಯಾಪಾರಸ್ಥರಿಗೆ ತೊಂದರೆಯಾಗುವುದರಿಂದ ಇನ್ನು ಮುಂದೆ ಎಂಎಸ್ಐಎಲ್ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡುವುದಿಲ್ಲ. ಹೊಸ ಬಾರ್, ವೈನ್ ಶಾಪ್ ಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
ಸಮಾಜಕ್ಕೆ ಹಾನಿಯಾಗದಂತೆ ಸಮತೋಲನ ಕಾಯ್ದುಕೊಳ್ಳಬೇ ಕಾಗಿದೆ.ಮದ್ಯ ಮಾರಾಟ ಕಮಿಷನ್ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಪ್ರಸ್ತಾಪಿಸಿ ಶೇಕಡ 10 ರಿಂದ 20ಕ್ಕೆ ಏರಿಸಬೇಕಾದರೆ ಮಾರಾಟಗಾರರು ಕೂಡ ನಿಗದಿತ ದರಕ್ಕೆ ಮದ್ಯ ಮಾರಾಟ ಮಾಡುವುದನ್ನು ಖಾತ್ರಿಗೊಳಿಸಬೇಕು. ದುಬಾರಿ ಮದ್ಯದ ದರ ಜುಲೈನಲ್ಲಿ ಇಳಿಕೆಯಾಗಲಿದ್ದು ಸಿ ಎಲ್ – 7 ಮದ್ಯದ ಅಂಗಡಿಗಳಿಂದ ಸಾಮಾಜಿಕ ಕಿರುಕುಳ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ವ್ಯಾಪಾರಸ್ಥರು,ಅಬಕಾರಿ ಇಲಾಖೆ ಹಾಗೂ ಪೊಲೀಸರು ಪರಸ್ಪರ ಕೈ ಜೋಡಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವೈನ್ ಶಾಪ್ ಗಳನ್ನು ‘ಸ್ನ್ಯಾಕ್ಸ್ ಬಾರ್’ ಆಗಿ ಪರಿವರ್ತಿಸುವ ಬಗ್ಗೆ ಕೂಡ ಸರಕಾರವು ಸಕಾರಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳಲಿದೆ. ವ್ಯಾಪಾರಿಗಳು ಹಾಗೂ ಇಲಾಖೆಯು ಪರಸ್ಪರ ಸೌಹಾರ್ದದಿಂದ ವರ್ತಿಸಿ ರಾಜ್ಯದಲ್ಲಿ ಗುಣಮಟ್ಟದ ಮದ್ಯ ಲಭ್ಯವಾಗುವಂತೆ ಸಹಕರಿಸಬೇಕು. ರಾಜ್ಯದಲ್ಲಿ ಸೆಕೆಂಡ್ಸ್ ಪೂರ್ಣ ಬಂದ್ ಆಗಿದ್ದು ಕಳ್ಳಭಟ್ಟಿ ಶೇಕಡ ಒಂದರಷ್ಟು ಕೂಡ ಇಲ್ಲ ಎಂದು ಸಚಿವ ತಿಮ್ಮಾಪುರ ಸ್ಪಷ್ಟಪಡಿಸಿದರು. ಮಧ್ಯ ಮಾರಾಟಗಾರರ ಅಸೋಸಿಯೇಷನ್ ಗಳ ಸಹಕಾರವೇ ಅಬಕಾರಿ ಇಲಾಖೆಯ ಯಶಸ್ಸಿಗೆ ಕಾರಣವಾಗಿದ್ದು ಪರಸ್ಪರ ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸಬೇಕು ಎಂದು ಹೇಳಿದರು
ಮದ್ಯ ಕಮಿಷನ್ ಹೆಚ್ಚಳ ತುರ್ತು ಅಗತ್ಯ: ಮದ್ಯ ವ್ಯಾಪಾರಿಗಳು ಶೇಕಡ 10ರಷ್ಟು ಕಮಿಷನ್ ಈಗ ಹೊಂದಿದ್ದು ಪ್ರಸ್ತುತ ಪರಿಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಕನಿಷ್ಠ ಶೇಕಡ 20 ರಷ್ಟು ಕಮಿಷನ್ ನಿಗದಿಗೊಳಿಸಬೇಕು ಹಾಗೂ ಪೊಲೀಸರು ಮತ್ತು ಅಬಕಾರಿ ಇಲಾಖೆಗಳು ಮಧ್ಯ ವ್ಯಾಪಾರಗಳಿಗೆ ನೀಡುವ ಕಿರುಕುಳವನ್ನು ತಪ್ಪಿಸಿ ಆದಾಯ ತಂದು ಕೊಡುವ ಉದ್ಯಮಕ್ಕೆ ವ್ಯಾಪಾರಸ್ಥರಿಗೆ ನೆರವಾಗಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ಸಚಿವರಿಗೆ ಮನವಿ ಮಾಡಿದರು.
ದಾಭಾಗಳಲ್ಲಿ ಮದ್ಯ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಣ್ಣಪುಟ್ಟ ಕಾನೂನು ಕ್ರಮದ ಹೆಸರು ಮುಂದಿಟ್ಟು ಅಬಕಾರಿ ದಂಡವನ್ನು 5 ಸಾವಿರದಿಂದ 50 ಸಾವಿರ ವರೆಗೆ ವಿಧಿಸುತ್ತಿದ್ದು ಇದನ್ನು ಕಡೆತಗೊಳಿಸಲು ಕ್ರಮ ಕೈಗೊಳ್ಳಬೇಕು. ನಿರಂತರ ಜಯಂತಿ ಹಬ್ಬ ಆಚರಣೆಗಳ ಹೆಸರಿನಲ್ಲಿ ಮದ್ಯದ ಅಂಗಡಿಗಳ ಮುಚ್ಚುಗಡೆ ಹೆಚ್ಚಾಗುತ್ತಿದ್ದು ಅದನ್ನು ಲೈಸೆನ್ಸ್ ಶುಲ್ಕದಲ್ಲಿ ಕಡಿತಗೊಳಿಸುವ ಕ್ರಮ ಅನುಸರಿಸಬೇಕು ಎಂದರು.
ಜಿಲ್ಲೆಯಲ್ಲಿ ಕಾನೂನಿನ ಕುಂಟು ನೆಪ ಹೇಳಿ 25ಕ್ಕೂ ಹೆಚ್ಚು ಮದ್ಯದಂಗಡಿಗಳನ್ನು ಬಾಗಿಲು ಮುಚ್ಚಿಸಲಾಗಿದೆ. ಅಬಕಾರಿ ಇಲಾಖೆಯ ಇಂತಹ ಕಠಿಣ ನಿಲುವು ಸಡಿಲಗೊಳಿಸುವುದು ಅಗತ್ಯ ಎಂದು ಅಸೋಸಿಯೇಷನ್ ನ ಗೌರವಾಧ್ಯಕ್ಷರಾದ ವೀರಯ್ಯ ಗುತ್ತೇದಾರ್ ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ನೂತನ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಅವರಿಗೆ ಮೈಸೂರು ಪೇಟ ಮತ್ತು ಶಾಲು ತೊಡಿಸಿ ಉದ್ಯಮಿ ಪವನ್ ಗುತ್ತೇದಾರ್ ಅವರು ವಿಶೇಷ ಸನ್ಮಾನವನ್ನು ನೆರವೇರಿಸಿದರು. ಸಚಿವ ಆರ್. ಬಿ ತಿಮ್ಮಾಪುರ ಅವರಿಗೆ ಅಸೋಸಿಯೇಷನ್ ಅಧ್ಯಕ್ಷರಾದ ಅಶೋಕ್ ಗುತ್ತೇದಾರ್ ಬಡದಾಳ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಹೆಚ್ಚುವರಿ ಆಯುಕ್ತಾರಾದ ನಾಗರಾಜಪ್ಪ ಜಂಟಿ ಆಯುಕ್ತರಾದ ಬಸವರಾಜ್ ಎಚ್, ಕಲ್ಬುರ್ಗಿಯ ಅಬಕಾರಿ ಜಿಲ್ಲಾಧಿಕಾರಿ ಶ್ರೀಮತಿ ಸಯ್ಯದ್ ಹಜ್ಮತ್ ಆಫ್ರಿನ್, ಡೆಪ್ಯುಟಿ ಸೂಪರಿಂಟೆಂಡೆಂಟ್ ದೊಡ್ಡಪ್ಪಗೌಡ, ಕಾಂಗ್ರೆಸ್ ಮುಖಂಡರಾದ ಶ್ಯಾಮ್ ನಾಟಿಕಾರ್, ಅಸೋಸಿಯೇಷನ್ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಸದಸ್ಯರಾದ ರಾಜಗೋಪಾಲ್ ರೆಡ್ಡಿ, ಪವನ್ ಗುತ್ತೇದಾರ್, ಅಕ್ಷಯ್ ಗುತ್ತೇದಾರ್, ತಿಮ್ಮಪ್ಪ ಎ. ಈ ಗಂಗಾವತಿ, ಅಶೋಕ್ ಗುತ್ತೇದಾರ್ ಅಳಂದ, ಸುರೇಶ್ ಗುತ್ತೇದಾರ್ ಮಟ್ಟೂರು, ಅಂಬಯ್ಯ ಗುತ್ತೇದಾರ್ ಆಕಾಶ್ ಗುತ್ತೇದಾರ್, ರಾಜೇಶ್ ದತ್ತು ಗುತ್ತೇದಾರ್, ಜೀವನ್ ಕುಮಾರ್ ಜತ್ತನ್, ಶೇಖರ್ ಗಾರಂಪಳ್ಳಿ ದಯಾನಂದ ಪೂಜಾರಿ,ಅನಿಲ್ ಯಾರಗೊಳ್,ಬಸವರಾಜ್ ಸ್ವಾಮಿ ಭಂಕೂರ್ ಸೇರಿದಂತೆ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು