ಕಲಬುರಗಿ ಲೋಕಸಭಾ ಚುನಾವಣಾ ಕದನ: ಡ್ಯಾಮೇಜ್ ಕಂಟ್ರೋಲ್ ಮಾಡಲು ಕೈ-ಕಮಲ ಸ್ಕೆಚ್

0
12

ಕಲಬುರಗಿ: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಅಫಜಲಪುರ ಮತಕ್ಷೇತ್ರದ ಹಿರಿಯ ಮುಖಂಡ ಮಾಲಿಕಯ್ಯ ಗುತ್ತೇದಾರ ಮರಳಿ ಗೂಡು ಸೇರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದ್ದಾರೆ. ಸುಮಾರು 30 ವರ್ಷಗಳಿಂದ ರಾಜಕೀಯ ಬದ್ಧ ವೈರಿಗಳಾಗಿದ್ದ ಮಾಲಿಕಯ್ಯ ಗುತ್ತೇದಾರ ಹಾಗೂ ಶಾಸಕ ಎಂ.ವೈ. ಪಾಟೀಲ ಅವರು ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಒಂದಾಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಪ್ರತಿ ಬಾರಿ ಅಫಜಲಪುರ, ಜೇವರ್ಗಿ ಮತಕ್ಷೇತ್ರಗಳು ಬಿಜೆಪಿಗೆ 20ರಿಂದ 25 ಸಾವಿರ ಲೀಡ್ ತಂದು ಕೊಡುತ್ತಿದ್ದರಿಂದ ಕಾಂಗ್ರೆಸ್ ಮುಖಂಡರಿಗೆ ಭಾರಿ ತಲೆನೋವು ಉಂಟಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಜೇವರ್ಗಿ ಹಾಗೂ ಅಫಜಲಪುರ ಕ್ಷೇತ್ರದ ಶಾಸಕರಿಗೆ ಲೀಡ್ ಟಾಸ್ಕ್ ನೀಡಲಾಗಿದೆ ಎಂಬ ಮಾಹಿತಿಯಿದೆ. ಕಾಂಗ್ರೆಸ್ ಪಕ್ಷ ತನ್ನ ಡ್ಯಾಮೇಜ್ ಕಂಟ್ರೋಲ್ ಮಾಡಲು ಜೇವರ್ಗಿ ಮತಕೇತ್ರದಲ್ಲಿ ಗಾಣಿಗ ಸಮುದಾಯದ ಮತ ಸೆಳೆಯಲು ಲಕ್ಷ್ಮಣ ಸವದಿಯವರು ಪೀಲ್ಡಿಗಳಿಸಿದ್ದಾರೆ. ಅದರಂತೆ ಅಫಜಲಪುರ ಮತಕೇತ್ರದಲ್ಲಿ ರಾಜಕೀಯ ಎದುರಾಳಿಗಳು ಪರಸ್ಪರ ಒಂದಾಗಿದ್ದರಿಂದ ಕಾಂಗ್ರೆಸ್‍ಗೆ ಶಕ್ತಿ ಬಂದಂತಾಗಿದೆ ಎಂದು ಹೇಳಬಹುದು.

Contact Your\'s Advertisement; 9902492681

ಶಾಸಕ ಅಲ್ಲಮಪ್ರಭು ಪಾಟೀಲ (ಕಲಬುರಗಿ ದಕ್ಷಿಣ) ಹಾಗೂ ಶಾಸಕಿ ಕನೀಜ್ ಫಾತಿಮಾ (ಕಲಬುರಗಿ ಉತ್ತರ) ಕ್ಷೇತ್ರಗಳಲ್ಲಿ ಸಜವಾಗಿಯೇ ಕಾಂಗ್ರೆಸ್‍ಗೆ ಲೀಡ್ ಆಗುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದ್ದು, ಜೇವರ್ಗಿ ಮತ್ತು ಅಫಜಲಪುರ ಮತಕ್ಷೇತ್ರದಲ್ಲಿ ಒಂದಿಷ್ಟು ಲೀಡ್ ಬಂದರೆ ಸಾಕು ಗೆಲ್ಲವುದು ಕಷ್ಟವೇನಲ್ಲ ಎಂಬುದು ಕಾಂಗ್ರೆಸ್ ಮುಖಂಡರ ಚಿಂತನೆಯಾಗಿದೆ.

ಆದರೂ ಮಾಲಿಕಯ್ಯ ಗುತ್ತೇದಾರ ಸಹೋದರ ನಿತಿನ್ ಗುತ್ತೇದಾರ ಅವರು, ಬಿಜೆಪಿ ಸೇರಿದ್ದರಿಂದ ವೈಯಕ್ತಿಕವಾಗಿ ಅವರು ಸಹ 20-25 ಸಾವಿರ ವೋಟ್ ಬ್ಯಾಂಕ್ ಹೊಂದಿರುವುದು, ಜೇವರ್ಗಿ ಮತಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮೈತ್ರಿ ಮುಖಂಡ ಜೆಡಿಎಸ್‍ನ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಕಾಂಗ್ರೆಸ್‍ಗೆ ಲೀಡ್ ಬರದಿದ್ದರೆ ಡಾ. ಅಜಯಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ? ಎಂದು ಪ್ರಶ್ನಿಸಿದ್ದು, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಬಿಜೆಪಿಗೆ 10 ವೋಟ್ ಲೀಡ್ ಬರದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.

ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿ ಮೈತ್ರಿ ಪಕ್ಷದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಶಾಸಕರಾಗಿರುವುದರಿಂದ ಕಾಂಗ್ರೆಸ್‍ಗೆ ಲೀಡ್ ಆಗುವುದು ಕಷ್ಟ ಎಂದು ಒಂದು ಕಡೆ ಹೇಳುತ್ತಿದ್ದರೆ, ಮರಳಿ ಗೂಡು ಸೇರಿರುವ ಮಾಜಿ ಸಚಿವರಾದ ಬಾಬುರಾವ ಚಿಂಚನಸೂರ ಮತ್ತು ಮಾಲಿಕಯ್ಯ ಗುತ್ತೇದಾರ ಅವರು ಈ ಬಾರಿ ಡ್ಯಾಮೇಜ್ ಕಂಟ್ರೋಲ್ ಮಾಡಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಗೆಲುವಿಗೆ ಪರಸ್ಪರ ಸ್ಕೆಚ್ : 2019ರ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಕಾರಣಗಳನ್ನು ಹುಡುಕಿರುವ ಕಾಂಗ್ರೆಸ್ ಪಕ್ಷ ಅದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿದಿದೆ. ಶತಾಯಗತಾಯ ಈ ಬಾರಿ ಗೆಲ್ಲಲೇಬೇಕು ಎಂದು ಪಣ ತೊಟ್ಟಂತಿದೆ. ಹೀಗಾಗಿ ಎಲ್ಲ ಬಗೆಯ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅಪ್ಪಿ ತಪ್ಪಿ ಮತ ಹಾಕಿದರೆ ಅದು ವೇಸ್ಟ್ ಆಗಲಿದೆ ಎಂದು ಬಿಜೆಪಿಯವರು ಪುಕಾರು ಮಾಡುತ್ತಿದ್ದಾರೆ. ಮೇಲಾಗಿ ರಾತೋರಾತ್ರಿ ಮತದಾರರ ಮನವೊಲಿಸುವ ಮಾತುಗಳನ್ನು ಕೂಡ ಆಡುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here