ಸುರಪುರ: ನಗರದ ಕಬಾಡಗೇರದಲ್ಲಿನ ಕಡ್ಲೆಪ್ಪನವರ ನಿಷ್ಠಿ ವಿರಕ್ತ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿಯವರ 60ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಶ್ರೀ ಮಠದ ಭಕ್ತರಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
ರಾಜಾ ಚನ್ನಪ್ಪ ನಾಯಕ ನೇತೃತ್ವದಲ್ಲಿ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿಯವರು ಚಾಲನೆ ನೀಡಿದರು,ಅನೇಕ ಮುಖಂಡರು ಸೇರಿದಂತೆ ನೂರಾರು ದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಅಲ್ಲದೆ ನಗರದ ವಿವಿಧ ಸಂಗೀತ ಕಲಾವಿದರಿಂದ ಮಂಗಳವಾರ ಸಂಜೆ ಸಂಗೀತ ಕಾರ್ಯಕ್ರಮವನ್ನು ಕೂಡ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಲ್ಲ ಭಕ್ತರಿಂದ ಪ್ರಭುಲಿಂಗ ಮಹಾಸ್ವಾಮೀಜಿಯವರನ್ನು ಸನ್ಮಾನಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದ ಪ್ರಭುಲಿಂಗ ಮಹಾಸ್ವಾಮೀಜಿ ಮಾತನಾಡಿ,ಇಂದು ಜನ್ಮ ದಿನವೆಂದು ತಾವೆಲ್ಲರು ನೆನಪಿಟ್ಟುಕೊಂಡು ಆಗಮಿಸಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ,ನಮಗೆ ಜನ್ಮ ದಿನಾಚರಣೆ ಎನ್ನುವುದು ಅಗತ್ಯವಾದ ಕಾರ್ಯವಲ್ಲ,ಆದರೆ ಈ ಮೂಲಕ ಅನ್ನದಾಸೋಹ ಮತ್ತು ಸಸಿಗಳ ವಿತರಣೆ ಮೂಲಕ ಪರಿಸರ ಕಾಳಜಿ ಮೆರೆದಿರುವುದು ಸಂತೋಷದ ಸಂಗತಿಯಾಗಿದೆ ಎಂದರು.ಅಲ್ಲದೆ ಯಾರೇ ತಮ್ಮ ಜನ್ಮ ದಿನವನ್ನು ಆಡಂಬರ ದಿಂದ ಆಚರಿಸಿಕೊಳ್ಳುವ ಬದಲು ಜನರಿಗೆ ಉಪಯೋಗವಾಗುವ ಕಾರ್ಯಗಳ ಮೂಲಕ ಆಚರಿಸಿಕೊಳ್ಳುವುದು ಮುಖ್ಯವಾದುದು ಎಂದರು.
ಅಲ್ಲದೆ ಇಂದು ಬಿಲ್ವಪತ್ರಿಯ ಮರಗಳ ಸಂಖ್ಯೆ ತುಂಬಾ ಕಡಿಮೆ ಇದೆ,ಭಾರತೀಯ ಸನಾತನ ಧಾರ್ಮಿಕ ಪರಂಪರೆಯಲ್ಲಿ ಬಿಲ್ವಪತ್ರಿಗೆ ತನ್ನದೆ ಆದ ಪ್ರಾಮುಖ್ಯತೆಯಿದೆ,ಆದ್ದರಿಂದ ಇಂದು ಆಗಮಿಸಿರುವ ಎಲ್ಲರಿಗೂ ಶ್ರೀ ಮಠ ದಿಂದ ಬಿಲ್ವಪತ್ರಿಯ ಸಸಿಗಳನ್ನು ನೀಡಲಾಗುತ್ತದೆ,ತಾವೆಲ್ಲರು ಈ ಸಸಿಗಳನ್ನು ತುಂಬಾ ಕಾಳಜಿಯಿಂದ ಬೆಳೆಸುವಂತೆ ತಿಳಿಸಿದರು.
ಅಲ್ಲದೆ ಮುಂಬರುವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಬಿಲ್ವಪತ್ರಿಯ ಸಸಿಗಳ ವಿತರಿಸುವ ವಿಶೇಷ ಅಭಿಯಾನ ನಡೆಸುವ ಇಚ್ಛೆ ಇದೆ,ಇದಕ್ಕೆ ಶ್ರೀಮಠದ ಎಲ್ಲ ಭಕ್ತರು ಸಹಕಾರ ನೀಡಬೇಕು ಎಂದ ತಿಳಿಸಿದರು.
ಈ ಸಂದರ್ಭದಲ್ಲಿ ಬಲಶೆಟ್ಟಿಹಾಳ ವಿರಕ್ತ ಮಠದ ಸಿದ್ದಲಿಂಗ ಶಾಸ್ತ್ರಿಗಳು,ರಾಜಾ ಚನ್ನಪ್ಪ ನಾಯಕ ಸೇರಿದಂತೆ ಶ್ರೀಮಠದ ನೂರಾರು ಸಂಖ್ಯೆ ಭಕ್ತರು ಹಾಗೂ ಸಂಗೀತ ಕಲಾವಿದರು ಭಾಗವಹಿಸಿದ್ದರು.