ಸುರಪುರ: ಲೋಕಯುಕ್ತರ ನಿರ್ದೇಶನದಂತೆ ಇಂದು ಆಗಮಿಸಿದ್ದು ತಾವು ಎಲ್ಲರು ನೀಡುವ ಹೇಳಿಕೆಗಳನ್ನು ಹಾಗೂ ನೀವು ನೀಡುವ ದಾಖಲೆಗಳನ್ನು ತೆಗೆದುಕೊಂಡು ಪರಿಶೀಲಿಸಿ ನಂತರ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕ ವಿಜಯಕುಮಾರ ತಿಳಿಸಿದರು.
ನಗರದ ರಂಗಂಪೇಟೆಯ ದೊಡ್ಡ ಬಜಾರದಲ್ಲಿನ ಸರ್ವೇ ನಂಬರ್ 73/1 ಹಾಗೂ 73/2 ರ ಒಟ್ಟು 11 ಎಕರೆ 26 ಗುಂಟೆ ಸರಕಾರಿ ಜಾಗದಲ್ಲಿ ಅನೇಕರು ಒತ್ತುವರಿ ಮಾಡಿಕೊಂಡು ಮನೆಗಳನ್ನು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ರಂಗಂಪೇಟೆಯ ಹಿರಿಯ ಮುಖಂಡ ರಾಮಚಂದ್ರಪ್ಪ ಟೊಣಪೆ ಎನ್ನುವವರು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ,ಲೋಕಾಯುಕ್ತರ ನಿರ್ದೇಶನಂದತೆ ಆಗಮಿಸಿದ್ದ ವಿಜಯಕುಮಾರ ಅವರು ದೂರುದಾರ ರಾಮಚಂದ್ರಪ್ಪ ಟೊಣಪೆ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ನಂತರ ಮಾತನಾಡಿ,ಒತ್ತುವರಿ ಎಂದು ಆರೋಪಿಸಲಾದ ಎಲ್ಲಾ ಜಾಗವನ್ನು ವೀಕ್ಷಿಸಲಾಗಿದೆ,ಈ ಜಾಗದಲ್ಲಿ ಜೆಸ್ಕಾಂ ಇಲಾಖೆ ಕಚೇರಿ,ಒಂದು ಶಾಲೆ,ಎರಡು ಆಸ್ಪತ್ರೆಗಳಿಗೆ,ಅಲ್ಲದೆ ನಗರಸಭೆಯ ಮಳಿಗೆಗಳನ್ನು ನಿರ್ಮಿಸಲಾಗಿದೆ.ಇವೆಲ್ಲವು ಸರಕಾರ ಸಂಬಂಧಿಸಿರುವುದರಿಂದ ಈ ಕಟ್ಟಡಗಳ ಜಾಗ ಒತ್ತುವರಿಯೊಳಗೆ ಬರುವುದಿಲ್ಲ,ಇನ್ನುಳಿದಂತೆ ದೂರುದಾರರು ನೀಡುವ ದಾಖಲೆಗಳು ಹಾಗೂ ಎಲ್ಲರ ಹೇಳಿಕೆ ಮತ್ತು ನೀಡುವ ದಾಖಲೆಗಳನ್ನು ಪರಿಶೀಲಿಸಿ ಲೋಕಾಯುಕ್ತ ಅಧಿಕಾರಿಗಳಿಗೆ ವರದಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ದೂರುರಾದ ರಾಮಚಂದ್ರಪ್ಪ ಟೊಣಪೆ ಮಾಹಿತಿ ನೀಡಿ,ಒಟ್ಟು 11 ಎಕರೆ 26 ಗುಂಟೆಯಲ್ಲಿ ಸುಮಾರು ಮೂರುವರೆ ಎಕರೆಯಷ್ಟು ಜಾಗ ಒತ್ತುವರಿಯಾಗಿದೆ,ಅನೇಕರು ಮನೆಗಳನ್ನು ಕಟ್ಟಿಕೊಂಡಿದ್ದಾರೆ,ಕೆಲವರು ಅಂಗಡಿ ಮಳಿಗೆಗಳನ್ನು ಕಟ್ಟಿಕೊಂಡಿದ್ದಾರೆ,ಈಗಾಗಲೇ ಎಲ್ಲಾ ದಾಖಲೆಗಳನ್ನು ಲೋಕಾಯುಕ್ತರಿಗೆ ನೀಡಿದ್ದೇವೆ,ಮುಂದೆಯೂ ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ,ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು,ನಗರಸಭೆ ಸಿಬ್ಬಂದಿಗಳು ಹಾಗೂ ಅನೇಕ ಜನ ಮುಖಂಡರು ಉಪಸ್ಥಿತರಿದ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.