ಕಲಬುರಗಿ: ಶಹಾಬಾದ ಪಟ್ಟಣದ 60 ವರ್ಷದ ಮಹಿಳೆಗೆ ಗುರುವಾರ ಕೊರೋನಾ ಸೋಂಕು ಕಂಡುಬಂದಿದ್ದರಿಂದ ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ ಅವರು ಶುಕ್ರವಾರ ಶಹಾಬಾದ ಪಟ್ಟಣಕ್ಕೆ ಭೇಟಿ ನೀಡಿದರು.
ಕೊರೋನಾ ಸೊಂಕು ಪತ್ತೆಯಾದ ರೋಗಿಯ ವಾಸದ ಪ್ರದೇಶವಾದ ಅಪ್ಪರ್ ಮಡ್ಡಿ ಪ್ರದೇಶಕ್ಕೆ ತೆರಳಿ ಅಲ್ಲಿ ಮುಂಜಾಗ್ರತವಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಅಧಿಕಾರಿಗಳ ತಂಡದೊಂದಿಗೆ ವೀಕ್ಷಿಸಿದರು.
ಪ್ರದೇಶಕ್ಕೆ ಅನಗತ್ಯ ಸಂಚಾರವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಬೇಕು. ಕೊರೋನಾ ಸೋಂಕು ಈ ಪ್ರದೇಶದಿಂದ ಬೇರೆ ಪ್ರದೇಶಕ್ಕೆ ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಲಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ, ತಾಲೂಕು ಆರೋಗ್ಯಾಧಿಕಾರಿ ಸುರೇಶ ಮೇಕಿನ್, ಆರ್.ಸಿ.ಹೆಚ್.ಓ ಪ್ರಭುಲಿಂಗ ಮಾನಕರ್ ಇದ್ದರು.