ವಾಡಿ: ಕೊರೊನಾ ವೈರಸ್ ವಿರುದ್ಧದ ಲಾಕ್ಡೌನ್ ಹೋರಾಟಕ್ಕೆ ಸಿಕ್ಕು ನಲುಗಿದ ಕೂಲಿ ಕಾರ್ಮಿಕರು, ಕಳೆದ ಒಂದು ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲಿ ಉಳಿದು ಹಸುವಿನ ಸಂಕಟ ಅನುಭವಿಸುತ್ತಿದ್ದಾರೆ. ದಿನಗೂಲಿ ಕುಟುಂಬಗಳ ನೆರವಿಗೆ ದಾವಿಸಿರುವ ಪುರಸಭೆ ಕಾಂಗ್ರೆಸ್ ಸದಸ್ಯರು, ಸಾವಿರಾರು ಬಡ ಕುಟುಂಬಗಳಿಗೆ ದವಸದಾನ್ಯಗಳನ್ನು ಹಂಚುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.
ಎಸಿಸಿ ಕಾರ್ಖಾನೆ ಸ್ಥಾಪನೆಯಿಂದ ವಾಡಿಯಲ್ಲಿ ದುಡಿಯುವ ಜನರ ಸಂಖ್ಯೆ ಹೆಚ್ಚಿದ್ದು, ದಿನಗೂಲಿ ಹಾಗೂ ಗುತ್ತಿಗೆ ಕಾರ್ಮಿಕರ ದಂಡೇ ಇಲ್ಲಿ ಶೇ.೯೦ ರಷ್ಟು ವಾಸವಿದೆ. ಇಂದು ದುಡಿದರೆ ಮಾತ್ರ ಹೊಟ್ಟೆಗೆ ಊಟ, ಒಂದು ದಿನ ಕೆಲಸ ಸಿಗದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆ ಎಂಬಂತಹ ಕುಟುಂಬಗಳು ದೊಡ್ಡ ಸಂಖ್ಯೆಯಲ್ಲಿದ್ದು, ಕೊರೊನಾ ಭೀತಿಯಿಂದ ಸೃಷ್ಠಿಯಾದ ಲಾಕ್ಡೌನ್ ಫಜೀತಿ ದುಡಿಯುವ ಕೈಗಳ ಕೆಲಸ ಕಸಿದುಕೊಂಡಿದೆ. ಮನೆಬಿಟ್ಟು ಹೊರ ಬರಲಾಗದ ಸ್ಥಿತಿಯಲ್ಲಿ ಬದುಕು ಹೇಗೆ ಎಂಬ ಆತಂಕದಲ್ಲಿ ಕಾರ್ಮಿಕರಿದ್ದಾರೆ.
ಮಹಾಮಾರಿ ಕೊರೊನಾ ತಂದಿಟ್ಟ ಸಂಕಟದ ದಿನಗಳಿಗೆ ಅಕ್ಷರಶಃ ನಲುಗಿರುವ ಸ್ಥಳೀಯ ಬಡ ಕುಟುಂಬಗಳ ನೆರವಿಗೆ ಮುಂದಾಗಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಚುನಾಯಿತ ಸದಸ್ಯರಾದ ಝರೀನಾ ಬೇಗಂ, ಶರಣು ನಾಟೀಕಾರ, ಗುಜ್ಜಾಬಾಯಿ ಸಿಂಗೆ, ಟೀಂ ಪ್ರಿಯಾಂಕ್ ಖರ್ಗೆ ಮುಖಂಡ ಶಮಶೀರ್ ಅಹ್ಮದ್, ಮಹ್ಮದ್ ಇರ್ಫಾನ್, ಯುವ ಮುಖಂಡರಾದ ಸುನೀಲ ಗುತ್ತೇದಾರ, ಮಹ್ಮದ್ ಅಶ್ರಫ್, ಹಣಮಯ್ಯ ಗುತ್ತೇದಾರ, ವಿಜಯಕುಮಾರ ಸಿಂಗೆ ಮತ್ತಿತರರು ಒಟ್ಟು ಒಂಬತ್ತು ಸ್ಲಂ ಬಡಾವಣೆಗಳ ನೂರಾರು ದಿನಗೂಲಿ ಕಾರ್ಮಿಕರಿಗೆ ಅಕ್ಕಿ, ಬೇಳೆ, ಹಿಟ್ಟು, ಸಕ್ಕರೆ, ಎಣ್ಣೆ ಪಾಕೇಟ್ಗಳನ್ನು ಉಚಿತವಾಗಿ ತಲುಪಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಒಂದೊಹೊತ್ತಿನ ಊಟಕ್ಕೂ ಚಿಂತೆಯಲ್ಲಿದ್ದ ಬಡ ಜನರ ಹೊಟ್ಟೆಗೆ ತಿಂಗಳ ಗಂಜಿ ದೊರೆತಂತಾಗಿದ್ದು, ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿದೆ.