ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕೃಷಿ ವಿರೋಧಿ ೩ಕಾಯ್ದೆಗಳನ್ನು ಮತ್ತು ಕರ್ನಾಟಕ ಜಾನುವಾರುಗಳ ವಧೆ ಪ್ರತಿಬಂಧಕ ಕಾಯ್ದೆಯನ್ನು ಕೈಬಿಡುವುದು ಸೇರಿದಂತೆ ರೈತಪರ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಹಲವು ಸಂಘಟನೆಗಳು ಕೈಗೊಂಡಿರುವ ರೈತರ ಹಕ್ಕೋತ್ತಾಯಗಳಿಗಾಗಿ ನಿರಂತರ ಧರಣಿಯಲ್ಲಿ ಗ್ರಾಮ ಪಂಚಾಯತ್ ನೌಕರರ ಸಂಘಟನೆಯಿಂದ ೧೦ನೇ ದಿನವಾದ ಧರಣಿಯಲ್ಲಿ ಸತ್ಯಾಗ್ರಹ ಕೈಗೊಂಡರು.
ಈ ಧರಣಿಯಲ್ಲಿ ಜೈಭೀಮ ನಂದಕೂರ ಇವರು ಮಾತನಾಡುತ್ತಾ ಮೋದಿ ಸರಕಾರವು ರೈತ ವಿರೋಧಿ ಕಾಯ್ದೆ ತರುತ್ತಿರುವುದನ್ನು ನಮ್ಮ ಸಂಘಟನೆಯು ತೀವ್ರವಾಗಿ ವಿರೋಧಿಸುತ್ತೇವೆ. ಈ ಕಾಯ್ದೆಗಳು ರೈತ ವಿರೋಧಿ ಮಾತ್ರವಲ್ಲ ದೇಶದ ಸಮಸ್ತ ವಿರೋಧದ ಕಾಯ್ದೆಗಳಾಗಿವೆ. ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಪೆಟ್ರೋಲ್ ಡಿಜೆಲ್ ಬೆಲೆಗಳನ್ನು ಮುಗಿಲಿಗೇರಿಸಲಾಗಿದೆ. ಹಾಗೆಯೇ ದೇಶದ ಸಂಪತ್ತನ್ನು ಅದಾನಿ ಅಂಬಾನಿಗಳಿಗೆ ಕೊಟ್ಟಿದ್ದಾರೆ. ಗ್ರಾಮ ಪಂಚಾಯತ್ ನೌಕರರನ್ನು ಖಾಯಂ ಮಾಡುತ್ತಿಲ್ಲ. ಆದರೆ ಇದೇ ಸಂದರ್ಭದಲ್ಲಿ ಅದಾನಿ ಅಂಬಾನಿಗಳ ಆದಾಯವು ಗಂಟೆಗೆ ೩೯ ಕೋಟಿ ಹೆಚ್ಚುವಂತೆ ಮಾಡಿದ್ದಾರೆ. ಇದು ಶ್ರಮಿಕರ ವಿರೋಧಿ ಸರಕಾರ ಆಗಿದೆ. ” ಎಂದು ಹೇಳಿದರು.
ಧರಣಿಯಲ್ಲಿ ರಾಜು ಫಿರೋಜಾಬಾದ, ಭೀಮಾಶಂಕರ್ ಹೊನ್ನಕಿರಣಗಿ, ಶರಣಬಸಪ್ಪ ಮಮಶೆಟ್ಟಿ, ಅಲತ್ತಾಫ ಇನಾಮದಾರ, ನಾಗರಾಜ ಕೋಟನೂರು, ಜೀವನ ಬಾಬು, ಶಿವಕುಮಾರ, ಅನಸುಬಾಯಿ, ಮೈನಾಬಾಯಿ ನಾಗನಳ್ಳಿ, ಸಾವಿತ್ರಿ ನಂದಿಕೂರು, ಕಸ್ತೂರಬಾಯಿ ನಂದಿಕೂರು ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ಕಾಯ್ದೆಗಳನ್ನು ಧಿಕ್ಕರಿಸಿದರು.
ಧರಣಿಯನ್ನುದ್ದೇಶಿಸಿ ಎಂ.ಬಿ.ಸಜ್ಜನ್, ಅಶ್ವಿನಿ ಮದನಕರ್ ಮಾತನಾಡಿದರು. ಪೂಜಾ ಸಿಂಘೆ ಕ್ರಾಂತಿಗೀತೆ ಹಾಡಿದರು.