ಶಹಾಬಾದ: ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೋವಿಡ್ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ .ಆದ್ದರಿಂದ ಎಲ್ಲರೂ ಚಾಚು ತಪ್ಪದೇ ಮಾರ್ಗಸೂಚಿಗಳನ್ನು ಪಾಲಿಸಿದರೆ ಕೊರೊನಾ ರೋಗಕ್ಕೆ ಕಡಿವಾಣ ಹಾಕಬಹುದು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ನಾನು ಕೊರೊನಾ ಪಾಸಿಟಿವ್ ಆಗಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಬಹುತೇಕ ಚೇತರಿಸಿಕೊಂಡಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿಗೆ ಬೇಟಿ ನೀಡಲಿರುವ ಸಂದರ್ಭದಲ್ಲಿ ಹೋಗಲು ವೈದ್ಯರ ಅನುಮತಿ ಪಡೆದೆ.ಆಗ ಅವರು ಮತ್ತೆ ಪರೀಕ್ಷೆಗ ಒಳಪಡಿಸಿದಾಗ ನನಗೆ ಪುನಃ ಕೋವಿಡ್ ದೃಢಪಟ್ಟಿದೆ. ನನ್ನ ಪತ್ನಿ ಜಯಶ್ರೀ ಮತ್ತಿಮಡು, ಪುತ್ರಿ ಆಕಾಂಕ್ಷಾ ಅವರಿಗೂ ಕೊರೋನಾ ದೃಢಪಟ್ಟಿದೆ.
ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಲಾಗುತ್ತಿದೆ. ಕ್ಷೇತ್ರದ ಜನರ ಆಶೀರ್ವಾದದಿಂದ ಎಲ್ಲರೂ ಶೀಘ್ರದಲ್ಲೇ ಗುಣಮುಖರಾಗಲಿದ್ದೇವೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಕೋವಿಡ್ ಎರಡನೇ ಅಲೆ ನಾವು ಊಹಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ಸ್ವಲ್ಪ ದಿನಗಳ ಕಾಲ ಹೊರಗಡೆ ಎಲ್ಲೂ ಅಡ್ಡಾಡದೇ ಮನೆಯಲ್ಲಿ ಕುಟುಂಬದೊಂದಿಗೆ ಆರಾಮವಾಗಿ ಇರಿ. ಯಾವುದಕ್ಕೂ ನಿರ್ಲಕ್ಷ್ಯ ಬೇಡ.
ಸರ್ವರೂ ಮುಂಜಾಗೃತೆ ವಹಿಸಬೇಕು. ಕ್ಷೇತ್ರದ ಜನರು ಯಾವುದೇ ಸಮಸ್ಯೆಗಳಿದ್ದರೆ ನನ್ನ ಫೋನ್ ನಂಬರ್ಗೆ ಕರೆ ಮಾಡಿ ತಿಳಿಸಿದರೆ ಸ್ಪಂದಿಸುತ್ತೆನೆ ಎಂದು ತಿಳಿಸಿದ್ದಾರೆ.