ಕಲಬುರಗಿ: ಮಾನವ ತನ್ನ ದುರಾಸೆಯಿಂದ ಪರಿಸರದ ಮೇಲೆ ದಬ್ಬಾಳಿಕೆ ಮಾಡಿ, ಅನೇಕ ಗಿಡ-ಮರಗಳನ್ನು ನಾಶಪಡಿಸಿ ಪರಿಸರ ಅಸಮತೋಲನಕ್ಕೆ ಕಾರಣವಾಗಿದ್ದಾನೆ. ಇದು ಪರಿಸರ ವ್ಯವಸ್ಥೆ ಮತ್ತು ಜೀವಿಗಳ ಮೇಲೆ ನೇರವಾದ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಎಲ್ಲೆಡೆ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಿಸುವುದು ಪ್ರಸ್ತುತ ದಿವಸಗಳಲ್ಲಿ ತುಂಬಾ ಅವಶ್ಯಕವಾಗಿದೆಯೆಂದು ಮುಖಂಡ, ಸಮಾಜ ಸೇವಕ ಶರಣು ಭುಸನೂರ ಅಭಿಮತ ವ್ಯಕ್ತಪಡಿಸಿದರು.
ನಗರದ ಕೈಲಾಸ ನಗರದಲ್ಲಿನ ಶಿವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ’ಬಸವ ಜಯಂತಿ’ ಅಂಗವಾಗಿ ’ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ’ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಗುರುವಾರ ಬೆಳೆಗ್ಗೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಅಧ್ಯಕ್ಷ ಸುನೀಲಕುಮಾರ ವಂಟಿ ಮಾತನಾಡಿ, ಯಾವುದೇ ಆಚರಣೆಗಳು ಅರ್ಥಪೂರ್ಣವಾಗಿ ಮಾಡಿದರೆ ಅದಕ್ಕೆ ಹೆಚ್ಚಿನ ಬೆಲೆ ಬರಲು ಸಾಧ್ಯವಿದೆ. ಪ್ರಸ್ತುತ ದಿಬಸಗಳಲ್ಲಿ ಆಕ್ಸಿಜನ್ ಹಾಹಾಕಾರ ಕಂಡುಬರುತ್ತಿದ್ದು, ಈಗಲಾದರೂ ಎಚ್ಚರಗೊಂಡು ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ-ಮುತ್ತಲೂ ಗಿಡಗಳನ್ನು ನೆಟ್ಟು, ಪೋಷಿಸಬೇಕು. ನಮ್ಮ ದೇಶದ ಒಟ್ಟು ವಿಸ್ತೀರ್ಣದಲ್ಲಿ ಶೇ.೩೩ರಷ್ಟು ಅರಣ್ಯದ ಅವಶ್ಯಕತೆಯಿದೆ. ಆದರೆ, ಪ್ರಸ್ತುತವಾಗಿ ಇದರ ಪ್ರಮಾಣ ಶೇ.೨೧.೫ರಷ್ಟಿದ್ದು, ಇದರಿಂದ ಏರು-ಪೇರಾಗುತ್ತಿದೆಯೆಂದರು.
ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ರಾಜೇಂದ್ರ ಬಡಿಗೇರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ, ನಾಗೇಶ ತಿಮಾಜಿ ಬೆಳಮಗಿ, ಕೃಷ್ಣಪ್ಪ ಬೆಳಮಗಿ, ದೌಲತ್ ಮಿಯಾ ಇದ್ದರು.