ವಚನ ದರ್ಶನ ಪ್ರವಚನ ಭಾಗ-೧೪

0
7

ಮಾತೆಂಬುದು ಜ್ಯೋರ್ತಿಲಿಂಗ
ಭಾಲ್ಕಿ-ಅಗಸ್ಟ-೨೪
ನುಡಿದಡೆ ಮುತ್ತಿನ ಹಾರದಂತಿರಬೇಕು
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದಡೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲಸಂಗಮದೇವಾನೆಂತೊಲಿವನಯ್ಯಾ?

ವಿಶ್ವಗುರು ಬಸವಣ್ಣನವರು ನಮಗೆ ನಡೆ-ನುಡಿ, ಉಡುಗೆ-ಊಟ ಹೀಗೆ ಜೀವನದ ಎಲ್ಲಾ ರಂಗದಲ್ಲಿಯೂ ಮಾರ್ಗದರ್ಶನ ಮಾಡುತ್ತಾರೆ. ವಚನಗಳು ನಮಗೆ ದಾರಿದೀಪ ಇದ್ದಂತೆ. ಜೀವನದ ಎಲ್ಲಾ ಸಮಸ್ಯೆಗಳಿಗೂ ವಚನಗಳಲ್ಲಿ ಪರಿಹಾರ ದೊರೆಯುತ್ತದೆ. ವಚನಗಳು ನಮ್ಮ ಪರಿಪೂರ್ಣ ಜೀವನವನ್ನು ರೂಪಿಸುತ್ತವೆ. ಆ ದಿಸೆಯಲ್ಲಿ ಬಸವಣ್ಣನವರು ಮೇಲಿನ ವಚನದಲ್ಲಿ ನಮ್ಮ ನುಡಿ, ಮಾತು ಹೇಗೆ ಇರಬೇಕು ಎನ್ನುವುದು ಅತ್ಯಂತ ಸುಂದರವಾಗಿ ಹೇಳುತ್ತಾರೆ. ನಮ್ಮ ಮಾತುಗಳೆ ನಮ್ಮ ಜೀವನವನ್ನು ಸುಖಿ-ದುಖಿಯಾಗಲಿಕ್ಕೆ ಕಾರಣವಾಗುತ್ತವೆ.

ಮಾತುಗಳು ಮೃದುವಾಗಿ ಸಕಾರಾತ್ಮಕವಾಗಿ ಇದ್ದರೆ ಜೀವನದ ಅನೇಕ ಜಗಳ ಮತ್ತು ತೊಂದರೆಗಳು ಕಡಿಮೆಯಾಗುತ್ತವೆ. ನಮ್ಮ ಮಾತು ಮುತ್ತಿನ ಹಾರದಂತೆ ಒಳಹೊರಗೂ ಶುದ್ಧವಾಗಿ ಇರಬೇಕು. ಮಾಣಿಕ್ಯದ ದೀಪ್ತಿಯಂತೆ ನಮ್ಮ ಮಾತಿನಲ್ಲಿ ಸತ್ಯದ ಪ್ರೀತಿಯ ಮಾನವೀಯತೆಯ ಬೆಳಕನ್ನು ಹೊಳೆಯುತ್ತಿರಬೇಕು. ನಮ್ಮ ಮಾತುಗಳಲ್ಲಿ ಸ್ಪಟಿಕದ ನಿರ್ಮಲತೆ ಇರಬೇಕು. ನಾವು ಮಾತನಾಡಿದರೆ ಲಿಂಗದೇವರು ಮೆಚ್ಚಿ ಅಹುದಹುದೆನಬೇಕು. ಈ ಎಲ್ಲಕ್ಕಿಂತಲೂ ಮಹತ್ವಪೂರ್ಣವಾದದ್ದು ನಮ್ಮ ನುಡಿಯ ಹಾಗೆ ನಡೆ ಇರಬೇಕು. ಒಳಗೊಂದು ಹೊರಗೊಂದು ಇರಬಾರದು. ಮಾತುಗಳು ಅಂತರಂಗದಿಂದ ಕೂಡಿರಬೇಕು.

Contact Your\'s Advertisement; 9902492681

ಶರಣರು ನಡೆ-ನುಡಿ ಸಿದ್ಧಾಂತವನ್ನು ಹೇಳಿದ್ದಾರೆ. ನಡೆಯೊಂದು ಪರಿ, ನುಡಿಯೊಂದು ಪರಿ ಇದ್ದರೆ ಕೂಡಲಸಂಗಮದೇವರು ಮೆಚ್ಚುವುದಿಲ್ಲ. ನಡೆ-ನುಡಿ ಒಂದಾದರೆ ಮಾತ್ರ ಆ ದೇವರ ಒಲಮೆಯನ್ನು ನಮಗಾಗುತ್ತದೆ. ಇಂದಿನ ದಿನಮಾನಗಳಲ್ಲಿ ಮಾತುಗಳು ಮುತ್ತಿನಂತೆ ಆಡುತ್ತಾರೆ. ಆದರೆ ನಡೆಯಲ್ಲಿ ಇರುವುದಿಲ್ಲ. ನಮ್ಮ ನಡೆ-ನುಡಿ ಒಂದಿಲ್ಲದಿದ್ದರೆ ನಮ್ಮ ವ್ಯಕ್ತಿತ್ವಕ್ಕೆ ಘನತೆ ಬರುವುದಿಲ್ಲ. ಬಸವಾದಿ ಶರಣರನ್ನು ನಾವು ಇಂದಿಗೂ ಇಷ್ಟೊಂದು ಯಾಕೆ ನೆನೆಯುತ್ತವೆ ಎಂದರೆ ಅವರು ನಡೆ-ನುಡಿ ಒಂದಾಗಿಸಿಕೊಂಡಿದ್ದರು. ನಡೆ-ನುಡಿ ಒಂದಾಗಿಸಿಕೊಂಡು ಹೇಳಿದವರ ಮಾತುಗಳಿಂದಲೇ ಸಮಾಜದಲ್ಲಿ ಪರಿವರ್ತನೆಯಾಗಲು ಸಾಧ್ಯವಿದೆ. ನಾವು ಹೇಳುವುದೊಂದು ಮಾಡುವದೊಂದು ನಮ್ಮ ಮಾತು ಯಾರೂ ಹೇಳುವುದಿಲ್ಲ.

ನಮ್ಮ ಮಾತುಗಳಲ್ಲಿ ಅಹಂಕಾರ ಇರಬಾರದು. ಚುಚ್ಚಿ ಚುಚ್ಚಿ ಮಾತನಾಡುವ ಸ್ವಭಾವ ನಮ್ಮದಾಗಬಾರದು. ಮೃದು ವಚನಗಳೇ ಸಕಲ ಜಪಂಗಳಯ್ಯ, ಮೃದು ವಚನಗಳೇ ಸಕಲ ತಪಂಗಳಯ್ಯ ಎಂದು ಬಸವಣ್ಣನವರು ಹೇಳುತ್ತಾರೆ. ಅಂದರೆ ನಾವು ಮೃದುವಾಗಿ, ವಿನಯವಂತರಾಗಿ, ನಿಷ್ಕಲ್ಮಶವಾಗಿ ಪರಿಶುದ್ಧ ಭಾವದಿಂದ ಮಾತನಾಡಿದರೆ ಅವು ಜಪ ಮತ್ತು ತಪ ಆಗುತ್ತವೆ. ಬೇರೆ ಜಪ ತಪ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಮಾತುಗಳು ಮಿತವಾಗಿರಬೇಕು. ಹಿತವಾಗಿರಬೇಕು.

ಆಗ ಲಿಂಗಪ್ರಭು ನಮ್ಮನ್ನು ಮೆಚ್ಚುತ್ತಾನೆ. ಅದಕ್ಕೆ ಅಲ್ಲಮಪ್ರಭುಗಳು ಮಾತೆಂಬುದು ಜ್ಯೋರ್ತಿಲಿಂಗ ಎಂದು ಹೇಳುತ್ತಾರೆ. ಅಂದರೆ ಮಾತುಗಳಿಂದ ನಮ್ಮ ಸುತ್ತಮುತ್ತಲಿನ ಪರಿಸರ ಸಮಾಜ ಬೆಳಕು ಕಾಣಬೇಕು. ಮಾತಿನಲ್ಲಿ ಬಹಳ ಸಾಮರ್ಥ್ಯ ಇದೆ. ಮಾತುಗಳ ಪ್ರಕಾರ ನಮ್ಮ ನಡೆ ಇದ್ದರೆ ಅದುವೇ ಶರಣ ಜೀವನ, ವಚನ ಜೀವನ ಆಗುತ್ತದೆ. ಆ ದಿಸೆಯಲ್ಲಿ ನಾವು-ನೀವು ಎಲ್ಲರೂ ಮುಂದೆ ಸಾಗೋಣ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here