- ದಯಾನಂದ ಹೊಸಮನಿ ಕಾಳಗಿ
ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ತೆಂಗಳಿ ಗ್ರಾಮದಲ್ಲಿ ವಾರ್ಡ್ ನಂಬರ್ 3 ಮತ್ತು 4ರಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು, ಗ್ರಾಮದ ಬಚ್ಚಲು ನೀರು ಮತ್ತು ರಸ್ತೆಯ ಮೇಲೆ ಇರುವ ಕಸ ಕಡ್ಡಿಗಳಿಂದ ಚರಂಡಿ ಸಂಪೂರ್ಣವಾಗಿ ಭರ್ತಿಯಾಗಿ ಒಡೆದು ರಸ್ತೆಯ ಮೇಲೆ ಚರಂಡಿ ನೀರು ನಿಲ್ಲುತ್ತಿದ್ದು ಅದೇ ಚರಂಡಿ ನೀರಿನಲ್ಲಿ ವಾರ್ಡಿನ ಜನರು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಷ್ಟೇ ಅಲ್ಲದೆ ಚರಂಡಿಯ ದುರ್ವಾಸನೆಯಿಂದಾಗಿ ಸೊಳ್ಳೆಗಳು ಹೆಚ್ಚಾಗಿ ವಾರ್ಡನ ಜನರು ಮಲೇರಿಯಾ ರೋಗಕ್ಕೆ ತುತ್ತಾಗುವ ಭೀತಿ ಎದುರಿಸುತಿದ್ದಾರೆ. ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಪ್ರಾಣವನ್ನು ಕಳೆದುಕೊಳ್ಳುವ ಸಂಭವಿದೆ. 3 ನೇ ವಾರ್ಡಿನಿಂದ ಹಳ್ಳಕ್ಕೆ ಹೋಗುವ ರಸ್ತೆ ಇದ್ದು ಆ ರಸ್ತೆಯ ಮೇಲೆ ಸಂಪೂರ್ಣವಾಗಿ ಹೊಲಸು ನೀರು ಮತ್ತು ಕೆಸರು ನಿಲ್ಲುತ್ತಿದೆ ಬಟ್ಟೆ ತೊಳೆಯಲು ಹಳ್ಳಕ್ಕೆ ಹೋಗಬೇಕಾದರೆ ತೊಂದರೆಯಾಗುತ್ತಿದೆ ಮತ್ತು ವಾರ್ಡ್ ನಂಬರ್ 4 ರಲ್ಲಿ ಶಾಹುಸೇನಿ ದರ್ಗಾಕ್ಕೆ ಹೋಗುವ ಮುಖ್ಯ ರಸ್ತೆ ಮೇಲೆ ಚರಂಡಿ ನೀರು ನಿಲ್ಲುತ್ತಿದೆ ದರ್ಗಾದವರೆಗೆ ಭಕ್ತಾದಿಗಳು ನಡೆದುಕೊಂಡು ಹೋಗುವುದಕ್ಕೆ ಆಗುತ್ತಿಲ್ಲ, ಈ ಸಮಸ್ಯೆಗಳ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದುರಿದ್ದಾರೆ.
ಈಗಲಾದರೂ ಸಮಸ್ಯೆಗಳನ್ನು ಬಗೆಹರಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತೆಂಗಳಿ ವಲಯ ಘಟಕದ ಅಧ್ಯಕ್ಷ ಅಬ್ದುಲ್ ರೌಫ್ ರವರು ಪಂಚಾಯತ್ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದು, ಈ ಸಮಸ್ಯೆಗಳು ಒಂದು ವಾರದೊಳಗೆ ಬಗೆಹರಿಸದಿದ್ದರೆ ಗ್ರಾಮ ಪಂಚಾಯತ ಎದುರುಗಡೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಅಜೀಜ್ ಬಳಗಾರ, ರಮೇಶ್ ಮಡಿವಾಳ, ಪ್ರಸಾದ್ ಹಳ್ಳಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.