3 ವರ್ಷಗಳ ಹಿಂದೆಯೇ ಪಿ.ಎಗೆ ವಜಾ
ಕಲಬುರಗಿ: ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರ ಪಿಎ ಆಗಿದ್ದ ಪರಶುರಾಮ್ಗೆ 3 ವರ್ಷಗಳ ಹಿಂದೆಯೇ ಕೆಲಸದಿಂದ ತೆಗೆದುಹಾಕಲಾಗಿದೆ. ಶಾಸಕರು ಹೆಸರು ಹೇಳಿಕೊಂಡು ಹಣ ಕೇಳಿದರೆ ಯಾರೂ ಕೊಡಬಾರದು ಎಂದು ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಇಟಗಿ ಮತ್ತು ಯಡ್ರಾಮಿ ಬ್ಲಾಕ್ ಅಧ್ಯಕ್ಷ ರುಕುಂ ಪಟೇಲ್ ಇಜೇರಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕರ ಹೆಸರು ಹೇಳಿ ಪರಶುರಾಮ ಹಣ ವಸೂಲಿ ಮಾಡುತ್ತಿರುವ ವಿಷಯ ಗಮನಕ್ಕೆ ಬಂದ ತಕ್ಷಣವೇ ಮೂರು ವರ್ಷಗಳ ಹಿಂದೆಯೇ ಈತನಿಗೆ ಡಾ. ಅಜಯಸಿಂಗ್ ಅವರು ಕೆಲಸದಿಂದ ತೆಗೆದುಹಾಕಿದ್ದಾರೆ. ಆದರೆ ಇನ್ನೂ ಪಿಎ ಇದ್ದೇನೆ ಎಂದು ಮುಗ್ಧ ಜನರಿಗೆ ಸುಳ್ಳು ಹೇಳಿ ಈ ಕೃತ್ಯ ಎಸಗುತ್ತಿದ್ದಾನೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು, ಸರಕಾರಿ ಅಧಿಕಾರಿಗಳು, ಗುತ್ತಿಗೆದಾರರು ಯಾರೂ ಇವನಿಗೆ ನಂಬಬಾರದು. ಇವನ ಮಾತಿಗೆ ಮರುಳಾಗಿ ಹಣ ಕೊಡಬಾರದು. ಇನ್ನು ಮುಂದೆ ಶಾಸಕರು ಪಿಎ ಅಂತ ಕರೆ ಮಾಡಿದರೆ ನೇರವಾಗಿ ನಮಗೆ ಕರೆ ಮಾಡಬೇಕು. ಹಣ ಕೊಟ್ಟು ವಂಚನೆಗೆ ಒಳಗಾಗಬಾರದು ಎಂದು ವಿನಂತಿಸಿದ್ದಾರೆ.
ಅನಾಯಾಸವಾಗಿ ಹಣ ಸಿಗುತ್ತಿದ್ದರಿಂದ ಈ ಕೃತ್ಯದಲ್ಲಿತೊಡಗಿದ್ದಾನೆ. ಹಣ ಪಡೆದು ಜನರಿಗೆ ವಂಚಿಸಿದ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಜಯಸಿಂಗ್ ಅವರು ಪೊಲೀಸ್ ಅಧಿಕಾರಿಗಳಿಗೂ ಸೂಚಿಸಿದ್ದಾರೆ. ಪರಶುರಾಮ್ಗೂ ಅಜಯಸಿಂಗ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಈ ವ್ಯಕ್ತಿಯಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.