ಕಲಬುರಗಿ: ಇಂದಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗೆ ಸಿದ್ಧಯ್ಯ ಪುರಾಣಿಕರ ಪದ್ಯಗಳು ಪ್ರಸ್ತುತವೆನಿಸಿವೆ, ಜಾತ್ಯತೀತ ಮನೋಭಾವ ಹೊಂದಿದ್ದರು, ಅವರು ಹೇಳಿದ್ದ ಮಾತಿನಂತೆ ಇವತ್ತು ಮನುಷ್ಯ ಬ್ರಾಹ್ಮಣ, ವೈಶ್ಯ, ಶೂದ್ರನಾಗಿದ್ದಾನೆ, ಆದರೆ ಮಾನವನಾಗಿಲ್ಲ. ಮನುಷ್ಯತ್ವವನ್ನು ಉಳಿಸಿಕೊಂಡಿಲ್ಲ, ಜಾತಿಯ ಸೋಂಕಿಗೆ ಮದ್ದನ್ನು ನೀಡುವ ಪದ್ಯಗಳನ್ನು ಅವರು ನೀಡಿದ್ದಾರೆ. ಕನ್ನಡತನದ ಬಗ್ಗೆ ಜಾಗೃತಿ ಮೂಡಿಸಿರುವುದರಿಂದ ಅವರನ್ನು ಸದಾ ಕಾಲ ಸ್ಮರಿಸುವುದು ಕನ್ನಡಿಗರರಾದ ನಮ್ಮ ಕರ್ತವ್ಯವಾಗಿದೆ ಎಂದು ಸಾಹಿತಿ ಜಗನ್ನಾಥ ಎಲ್.ತರನಳ್ಳಿ ಮಾರ್ಮಿಕವಾಗಿ ಹೇಳಿದರು.
ಸಾಹಿತಿ ಶಿವಯ್ಯ ಮಠಪತಿ ಸ್ಮರಣಾರ್ಥ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಕಾಳಗಿ ಪಟ್ಟಣದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಶ್ರೀಮತಿ ನಾಗರತ್ನಮ್ಮ ಶಿವಶರಣಪ್ಪ ಕಮಲಾಪುರ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ ‘ಸಾಂಸ್ಕೃತಿಕ ಪ್ರತಿಭೆ ಸಿದ್ಧಯ್ಯ ಪುರಾಣಿಕ’ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಆಸೆ ಎಂಬ ದೀಪ ಹೊತ್ತಿ ಉರಿಯುತ್ತಿದೆ. ಅದಕ್ಕೆ ಪೂರಕವೆಂಬಂತೆ ಸಾಹಿತಿಗಳ ಚಿಂತನೆ ಹಾಗೂ ಅವರ ಬರಹಗಳ ಬಗ್ಗೆ ಬೆಳಕು ಚೆಲ್ಲುವುದು ಅವಶ್ಯವಿದೆ. ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿತೆಯ ಸಾರ ವಿಶ್ವ ಮಾನವ ಸಂದೇಶಕ್ಕೆ ಸಾಟಿಯಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಇಂದಿನ ಯುವ ಜನತೆಗೆ ಸಿದ್ಧಯ್ಯ ಪುರಾಣಿಕ ಅವರ ವಿಚಾರಗಳು ಸ್ಫೂರ್ತಿ ಕೊಡುತ್ತವೆ ಎಂದು ಹೇಳಿದರು.
ನಿರಂತರವಾಗಿ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಐತಿಹಾಸಿಕ ಪರಂಪರೆ ಹೊಂದಿದ ಕಾಳಗಿಯನ್ನು ಸಾಂಸ್ಕೃತಿಕ ತಾಲೂಕಾವನ್ನಾಗಿಸುವ ಪಣ ತೊಡಲಾಗಿದೆ. ಇದಕ್ಕೆ ತಾಲೂಕಿನ ಜನತೆ ಸಹಕರಿಸಬೇಕು. – ವಿಜಯಕುಮಾರ ತೇಗಲತಿಪಿ ಸಾಂಸ್ಕೃತಿಕ ಸಂಘಟಕ
ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಬಸಪಟ್ಟಣ ಎಸ್.ಎ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ.ಶಿವಶರಣಪ್ಪ ನೀಲೂರಕರ್, ಖ್ಯಾತ ಪ್ರವಚನಕಾರ ಸಂಗಮೇಶ ಶಾಸ್ತ್ರಿ ಮಾಶಾಳ, ಶಿಕ್ಷಣ ಇಲಾಖೆಯ ಬಿ.ಆರ್.ಪಿ. ಅಂಬಾರಾಯ ಪೂಜಾರಿ, ಶ್ರೀ ನೀಲಕಂಠ ಕಾಳೇಶ್ವರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಚಂದ್ರಕಾಂತ ವನಮಾಲಿ, ಪ್ರಾಧ್ಯಾಪಕ ಡಾ.ಶಿವಶರಣಪ್ಪ ಮೋತಕಪಲ್ಲಿ ವೇದಿಕೆ ಮೇಲಿದ್ದರು.