ನಮ್ಮ ಮತ ನಮ್ಮ‌ ಧ್ವನಿ- ನೀವೇನಂತಿರಾ?

2
481

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಒಂದು ದೊಡ್ಡ ಶಕ್ತಿ. ಮತದಾನ ನಮ್ಮ ಹಕ್ಕು. ಉತ್ತಮ ವ್ಯಕ್ತಿಗೆ ಮತ ಹಾಕುವ ಮೂಲಕ ಉತ್ತಮ ಆಡಳಿತ ನಿರೀಕ್ಷೆ ಮಾಡಬಹುದು.

18 ವರ್ಷ ತುಂಬಿದವರೆಲ್ಲ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲ ತಂದುಕೊಡಬೇಕು.

Contact Your\'s Advertisement; 9902492681

ಮತ ಹಾಗೆಂದೇನು?: 

ಹಾಗೆ ನೋಡಿದರೆ ಮತ ಎಂದರೆ ಯಾವುದೇ ಜಾತಿ, ಪಂಥ ಸೂಚಿಸುವ ಪದ ಅಲ್ಲ. ಬದಲಾಗಿ ನಮ್ಮ ಅಭಿಪ್ರಾಯ, ನಮ್ಮ ನಿಲುವು, ನಮ್ಮ ಆಯ್ಕೆ, ನಮ್ಮ ಒಲವು ಯಾರ ಪರ ಎಂಬುದನ್ನು ಸೂಚಿಸುವ ಪದ. ಇಂತಹ ಪವಿತ್ರವಾದ ಮತವನ್ನು ದಾನ ಮಾಡುವ ಪ್ರಕ್ರಿಯೆಗೆ ಮತದಾನ ಎನ್ನುತ್ತೇವೆ. ಚುನಾವಣಾ ವೇಳೆಯಲ್ಲಿ ಪ್ರಜಾಮತ ಯಾರ ಕಡೆ ಎಂಬುದನ್ನು ಕಾರ್ಯರೂಪಕ್ಕೆ ತರುವುದೇ ಆಗಿದೆ.

‘ಮತ ನಮ್ಮ ಮನೆಯ ಮಗಳು ಇದ್ದ ಹಾಗೆ. ಇದನ್ನು ಮಾರಿಕೊಳ್ಳಬಾರದು’ ಎಂದು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ ಮಾತಿನಲ್ಲಿ ಮತದಾನದ ಮಹತ್ವ ಅಡಗಿದೆ. ಮತದಾನ ಮಾಡುವ ಮೂಲಕ ನಾವು ನಿಜವಾದ ದೇಶಪ್ರೇಮ ಮೆರೆಯಬೇಕಾಗಿದೆ.‌

ನಮ್ಮ ಒಲವು, ನಿಲುವುಗಳನ್ನು ಪ್ರಕಟಿಸುವ ಇಂತಹ ಮತ  ಬದಲಾದ ಈಗಿನ ಕಾಲದಲ್ಲಿ ಸ್ವತಃ ಮತದಾರನದ್ದೇ? ಎನ್ನುವುದೇ ನಮ್ಮನ್ನು ಕಾಡುತ್ತಿರುವ ಬಹು ದೊಡ್ಡ ಪ್ರಶ್ನೆಯಾಗಿದೆ.  ಹಣ, ಹೆಂಡಕ್ಕಾಗಿ ನಾವು ನಮ್ಮ ಮತವನ್ನು ಮಾರಿಕೊಳ್ಳುತ್ತಿರುವುದೇ ಈ ಪ್ರಶ್ನೆಗೆ ನೇರ ಕಾರಣವಾಗಿದೆ.

ಮತದಾನದ ಮಹತ್ವ:

ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಯೂ ಒಂದು ಪ್ರಹಸನವಾಗಿರುವುದರಿಂದ  ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಅದನ್ನೇ ಮಾಡುತ್ತಿದ್ದಾರೆ.‌ ಮತದಾರರು ಸಹ ಕೆಲವರು ಮತ ಹಾಕುವುದೇ ಇಲ್ಲ. ಇನ್ಮೂ ಹಲವರು ಯಾವುದ್ಯಾವುದೋ ಆಮಿಷಕ್ಕೆ ಒಳಗಾಗಿ ತಮ್ಮ ಅಮೂಲ್ಯ ಮತದಾನದ ಹಕ್ಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರಸ್ತಂಭ. ಆದರೆ ಈ ಮತದಾನ ವ್ಯವಸ್ಥೆಯ ಮೇಲೂ ಕೆಲವರು ತಮ್ಮ ಪ್ರಭುತ್ವ ಸಾಧಿಸುತ್ತಿರುವುದು ನಮ್ಮ ದೇಶದ ಅಪಾಯಕಾರಿ ಬೆಳವಣಿಗೆಯಲ್ಲಿ ಒಂದಾಗಿದೆ.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಭಾರತದ ಜನಸಂಖ್ಯೆ 130 ಕೋಟಿ, ಕರ್ನಾಟಕದ ಜನಸಂಖ್ಯೆ 6.50 ಕೋಟಿ, ದೇಶದಲ್ಲಿ ಮತದಾನದ ಹಕ್ಕು ಪಡೆದಿರುವವರು ಸುಮಾರು 80-85 ಕೋಟಿ, ಕರ್ನಾಟಕದಲ್ಲಿ 4.75 ಕೋಟಿ ಜನ. ಈ ಮತದಾರರು ತಮ್ಮ ಆಳುವ  ವ್ಯಕ್ತಿಯನ್ನು  ಆಯ್ಕೆ ಮಾಡಿಕೊಳ್ಳುವ ಕಾಲ ಇದಾಗಿದೆ.

ಮತದಾನ ಪದ್ಧತಿ ಜಾರಿ ಬಂದು ಸುಮಾರು 66-67 ವರ್ಷಗಳಾಗಿವೆ. ಜನವರಿ 25 ರಾಷ್ಟ್ರೀಯ ಮತದಾನದ ದಿನ ಆಚರಿಸಲಾಗುತ್ತಿದೆ. ಮತದಾನ ಕಡ್ಡಾಯ. ಮತದಾನ ಪವಿತ್ರ ಎಂದು ಹೇಳಲಾಗುತ್ತಿದ್ದರೂ ಇಂದಿಗೂ ಮತ ಮಾರಿಕೊಳ್ಳುವ ಚಾಳಿ ಮುಂದುವರಿದಿರುವುದು ನಮ್ಮ ದೇಶದ ದುರಂತವೆಂದೇ ಹೇಳಬೇಕಾಗಿದೆ.

ಪ್ರಜಾಪ್ರಭುತ್ವದ ಮೌಲ್ಯ ಉಳಿಸುವ ಗುರುತರ ಹೊಣೆ ನಮ್ಮೆಲ್ಲರ ಮೇಲಿರುವುದರಿಂದ ನಾವು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರತಿಶತ ಮತದಾನ ಆಗುವಂತೆ ನೋಡಿಕೊಳ್ಳಬೇಕು. ಮತದಾನದ ಹಕ್ಕನ್ನು ಸ್ವಾಭಿಮಾನದಿಂದ, ಗೌರವಯುತವಾಗಿ, ನಿರ್ಭೆಡೆಯಿಂದ ಚಲಾಯಿಸಬೇಕು.

ಸಂವಿಧಾನದ ಆಶಯ ಎತ್ತಿ ಹಿಡಿಯುವ ಈ ಮತದಾನದ ಹಬ್ಬದಲ್ಲಿ ನಾವೆಲ್ಲರೂ ಗುಪ್ತ ಮತದಾನದ ಮೂಲಕ  ನಮಗೆ ಬೇಕಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಬನ್ನಿ ಹಾಗಾದರೆ ವೋಟ್ ಮಾಡೋಣ…

– ಶಿವರಂಜನ್ ಸತ್ಯಂಪೇಟೆ

2 ಕಾಮೆಂಟ್ಗಳನ್ನು

  1. ಮತದಾನ ಕುರಿತು ,ಸರಳವಾಗಿ ಅಷ್ಟೇ ಸುಂದರವಾಗಿ ಮತದಾನ ಮಾಡಲು ಕರೆ ನೀಡಿದ್ದಿರಿ ಅಣ್ಣಾ..ಸಂತಸವಾಯಿತು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here